ಭಾನುವಾರ, ಏಪ್ರಿಲ್ 15, 2012

ಚನ್ನಕೇಶವ ದೇವಾಲಯ - ಹಿರೆಕಡಲೂರು


ಒಂದು ಊರಿನ ಜನರಿಗೆ ತಮ್ಮ ಊರಿನ ಇತಿಹಾಸದ ಬಗ್ಗೆ ಹೆಮ್ಮೆ ಇಲ್ಲದಿದ್ದರೆ, ಹೊಯ್ಸಳ ಆಳ್ವಿಕೆಯ ಗುರುತಾಗಿ ತಮ್ಮ ಊರಿನಲ್ಲಿರುವ ದೇವಾಲಯದ ಬಗ್ಗೆ ಕಾಳಜಿ, ಅಭಿಮಾನ ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಹಿರೆಕಡಲೂರಿನ ಚನ್ನಕೇಶವ ದೇವಾಲಯ ಸಾಕ್ಷಿ. ಊರಿನ ಮುಖ್ಯ ರಸ್ತೆಯಿಂದ ಸ್ವಲ್ಪ ಒಳಗೆ ದಿಬ್ಬವೊಂದರ ಮೇಲೆ ಈ ದೇವಾಲಯವಿದೆ. ರಸ್ತೆಯ ಬದಿಯಲ್ಲಿರುವ ಕಟ್ಟೆಯೊಂದರ ಮೇಲೆ ಒಂದಷ್ಟು ಜನರು ಹರಟುತ್ತಾ ಕುಳಿತಿದ್ದರು. ದೇವಾಲಯಕ್ಕೆ ದಾರಿ ತೋರಿಸಿ ನಂತರ ನಮ್ಮನ್ನೇ ಹಿಂಬಾಲಿಸುತ್ತಾ ದೇವಾಲಯಕ್ಕೆ ಬಂದರು.


ಪಾಳುಬೀಳುತ್ತಿರುವ ದೇವಾಲಯವಿದು. ಊರಿನವರಿಗೆ ದೇವಾಲಯದ ಬಗ್ಗೆ ಎಳ್ಳಷ್ಟೂ ಕಾಳಜಿಯಿಲ್ಲ. ಕಾಳಜಿಯೇ ಇಲ್ಲವೆಂದ ಮೇಲೆ ಇನ್ನು ಹೆಮ್ಮೆ ಮತ್ತು ಅಭಿಮಾನ ದೂರದ ಮಾತುಗಳು. ದೇವಾಲಯದ ಸುತ್ತಲೂ ಮತ್ತು ಮೇಲೆಲ್ಲಾ ಗಿಡಗಂಟಿಗಳು. ದೇವಾಲಯಕ್ಕಿದ್ದ ಪ್ರಾಂಗಣ ಬಿದ್ದುಹೋಗಿದ್ದು ಪ್ರಾಂಗಣ ಗೋಡೆಯ ಕಲ್ಲುಗಳಲ್ಲಿ ಕೆಲವು ಅಲ್ಲೇ ಅನಾಥವಾಗಿ ಬಿದ್ದುಕೊಂಡಿದ್ದರೆ, ಹೆಚ್ಚಿನವು ಕಣ್ಮರೆಯಾಗಿವೆ. ಸುತ್ತಲೂ ಗಿಡಗಂಟಿಗಳು ಅದ್ಯಾವ ಪರಿ ವ್ಯಾಪಿಸಿಕೊಂಡಿವೆ ಎಂದರೆ ದೇವಾಲಯಕ್ಕೊಂದು ಪ್ರದಕ್ಷಿಣೆ ಹಾಕಲು ಕಷ್ಟಪಡಬೇಕಾಯಿತು.


ದಿಬ್ಬದ ಮೇಲೆ ನಿರ್ಮಾಣಗೊಂಡ ಹೊಯ್ಸಳ ದೇವಾಲಯಗಳಿಗೆ ಜಗಲಿ(ಜಗತಿ)ಯ ರಚನೆಯಿರುವುದು ಬಹಳ ಕಡಿಮೆ. ಇಂತಹ ದೇವಾಲಯಗಳು ನೇರವಾಗಿ ನೆಲಗಟ್ಟಿನಿಂದಲೇ ಮೇಲೇರುತ್ತವೆ ಮತ್ತು ದೇವಾಲಯ ಹಾಗೂ ಪ್ರಾಂಗಣ ಗೋಡೆಯ ನಡುವಿನ ಅಂತರವೇ ಪ್ರದಕ್ಷಿಣಾ ಪಥವಾಗಿರುತ್ತದೆ. ಹಿರೆಕಡಲೂರಿನ ದೇವಾಲಯ ದಿಬ್ಬದ ಮೇಲೆ ಇರುವುದರಿಂದ ಇಲ್ಲಿ ಜಗಲಿಯಿಲ್ಲ. ಪ್ರಾಂಗಣಕ್ಕಿದ್ದ ದ್ವಾರದ ಗುರುತಾಗಿ ಎರಡು ಕಲ್ಲಿನ ಕಂಬಗಳು ಅನಾಥವಾಗಿ ನಿಂತುಕೊಂಡಿವೆ. ದೇವಾಲಯದ ಹಿಂಭಾಗದಲ್ಲಿ ಪ್ರಾಂಗಣ ಗೋಡೆಯ ಅಳಿದುಳಿದ ಕುರುಹುಗಳನ್ನು ಕಾಣಬಹುದು.


೧೨ನೇ ಶತಮಾನದಲ್ಲಿ ಹೊಯ್ಸಳ ದೊರೆ ಎರಡನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ ಈ ದೇವಾಲಯ ನಿರ್ಮಾಣಗೊಂಡಿತು. ಆಗ ಈ ಊರನ್ನು ’ಅರುಂಧತಿಪುರ’ ಎಂದು ಕರೆಯಲಾಗುತ್ತಿತ್ತು. ದೇವಾಲಯದ ಮುಖಮಂಟಪದಲ್ಲಿ ಈಗ ೧೪ ಕಂಬಗಳು ಇವೆ. ಎಲ್ಲವೂ ಸುಸ್ಥಿತಿಯಲ್ಲಿದ್ದಿದ್ದರೆ ಇದೊಂದು ಸುಂದರ ಮುಖಮಂಟಪ.


ನವರಂಗದ ದ್ವಾರವು ಐದು ತೋಳುಗಳನ್ನು ಹೊಂದಿದ್ದು, ಮೂರನೆಯ ತೋಳನ್ನು ಹೊರತುಪಡಿಸಿ ಉಳಿದವುಗಳಲ್ಲಿ ಪ್ರತ್ಯೇಕ ಬಳ್ಳಿಸುರುಳಿಯ ಕೆತ್ತನೆಗಳಿವೆ. ದ್ವಾರದ ಇಕ್ಕೆಲಗಳಲ್ಲಿ ಶಂಖಚಕ್ರಗದಾಪದ್ಮಧಾರಿಯಾಗಿರುವ ವಿಷ್ಣುವಿನ ಮೂರ್ತಿಗಳಿವೆ. ವಿಷ್ಣುವಿನ ಈ ಮೂರ್ತಿಗಳು ಪ್ರಭಾವಳಿ ಕೆತ್ತನೆ ಮತ್ತು ಪರಿಚಾರಿಕೆಯರನ್ನು ಒಳಗೊಂಡಿವೆ. ದ್ವಾರದ ಮೇಲ್ಗಡೆ ಗಜಲಕ್ಷ್ಮೀಯ ಸ್ಫುಟವಾದ ಕೆತ್ತನೆಯಿದೆ. ಈ ಸುಂದರ ಕೆತ್ತನೆಯೂ ನಶಿಸಿಹೋಗುತ್ತಿದೆ.


ಗರ್ಭಗುಡಿಯು ಸಂಪೂರ್ಣವಾಗಿ ಸೋರುತ್ತಿರುವುದರಿಂದ ದೇವರ ಮೂರ್ತಿಯನ್ನು ನವರಂಗದ ನಾಲ್ಕು ಕಂಬಗಳ ನಡುವೆ ಇರಿಸಲಾಗಿದೆ. ಇಲ್ಲೂ ಅಲ್ಲಲ್ಲಿ ಸೂರು ಸೋರುತ್ತದೆ. ಕೇವಲ ಒಂದೆರಡು ಮಳೆಗೆ ಈ ಪರಿ ನೀರು ಒಳಗೆ ಬಂದರೆ ಇನ್ನು ಮಳೆಗಾಲದಲ್ಲಿ ಇಲ್ಲಿ ದೃಶ್ಯ ಹೇಗಿರಬಹುದೇನೋ?


ಗರುಡನ ಕೆತ್ತನೆಯಿರುವ ಪೀಠದ ಮೇಲೆ ಇರುವ ೬ ಅಡಿ ಎತ್ತರದ ಚನ್ನಕೇಶವನ ಆಕರ್ಷಕ ವಿಗ್ರಹವಿದು. ಬಿಳಿ ಪಾಚಿಯ ಪ್ರಭಾವದಿಂದ ಚನ್ನಕೇಶವ ಶ್ವೇತವರ್ಣಧಾರಿಯಂತೆ ಕಾಣುತ್ತಿದ್ದ. ಶ್ರೀದೇವಿ ಮತ್ತು ಭೂದೇವಿಯರು ಮೈತುಂಬಾ ಸುಣ್ಣ ಬಳಿದವರಂತೆ ಚನ್ನಕೇಶವನ ಇಕ್ಕೆಲಗಳಲ್ಲಿ ಇದ್ದೂ ಕಾಣದವರಾಗಿಬಿಟ್ಟಿದ್ದರು. ವಿಗ್ರಹದಲ್ಲಿರುವ ಪ್ರಭಾವಳಿ ಕೆತ್ತನೆಯೂ ನಶಿಸುತ್ತಿದೆ. ಇಲ್ಲಿ ದೈನಂದಿನ ಪೂಜೆ ನಡೆಯುವುದಿಲ್ಲ. ಊರಿನವರೇ ಯಾರಾದರೂ ಆಸ್ತಿಕರು ಆಗಾಗ ಬಂದು ಚನ್ನಕೇಶವನಿಗೆ ಶೃಂಗಾರ ಮಾಡಿ, ಆರತಿ ಎತ್ತಿ, ಪೂಜೆ ಮಾಡುತ್ತಾರೆ.


ದೇವಾಲಯದ ಮುಖಮಂಟಪದಲ್ಲಿ ಮತ್ತು ನವರಂಗದಲ್ಲಿ ಛಾವಣಿಯ ಒಳಮೇಲ್ಮೈಯಲ್ಲಿ ಆಕರ್ಷಕ ಕೆತ್ತನೆಗಳಿವೆ. ನವರಂಗದಲ್ಲಿರುವ ಕೆತ್ತನೆಯಂತೂ ಮನಮೋಹಕವಾಗಿದೆ.


ದೇವಾಲಯದ ಛಾವಣಿ ಕುಸಿದಿದೆ ಮತ್ತು ಒಂದು ಪಾರ್ಶ್ವದಲ್ಲಿ ಹೊರಗೋಡೆಯ ಕಲ್ಲುಗಳೂ ಕಳಚಿಹೋಗಿವೆ. ಹೊರಗೋಡೆಯಲ್ಲಿ ಮತ್ತು ಗೋಪುರದಲ್ಲಿ ಯಾವುದೇ ಭಿತ್ತಿಚಿತ್ರಗಳಿಲ್ಲ. ಗೋಪುರ ಸುಸ್ಥಿತಿಯಲ್ಲಿದ್ದರೂ, ಮೇಲೆ ಇರುವ ಕಮಲದ ಮುಂಭಾಗವು ಒಡೆದಿದ್ದು ಸೋರುವಿಕೆಗೆ ಇದೇ ಪ್ರಮುಖ ಕಾರಣವಿರಬಹುದು. ಕಲಶದ ತುದಿಯೂ ತುಂಡಾಗಿದೆ.


ದೇವಾಲಯ ಸ್ವಚ್ಛ ಮಾಡಲು ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಎಂದು ನಮ್ಮಲ್ಲಿ ಹಳ್ಳಿಗರ ವಿನಂತಿ! ಊರಿನ ಜನರು ದೇವಾಲಯದ ಪರಿಸರವನ್ನಾದರೂ ಸ್ವಚ್ಛ ಮಾಡಬಹುದಲ್ಲವೇ? ಪ್ರಾಚ್ಯ ವಸ್ತು ಇಲಾಖೆಯೇ ಎಲ್ಲವನ್ನೂ ಮಾಡಬೇಕು ಎಂದು ನಿರೀಕ್ಷಿಸಿದರೆ ಅದು ಅಸಾಧ್ಯದ ಮಾತು. ಆ ಇಲಾಖೆಯಾದರೂ ಎಷ್ಟು ಮಾಡೀತು? ಆಯಾ ಊರಿನವರು ತಮ್ಮ ಊರಿನ ದೇವಾಲಯದ ರಕ್ಷಣೆಗೆ ಮುಂದಾದರೆ ಅದಕ್ಕಿಂತ ಉತ್ತಮ ಬೇರೇನೂ ಇಲ್ಲ. ಹಿರೆಕಡಲೂರಿನ ಜನರು ಯಾವಾಗ ಇದನ್ನರಿಯುತ್ತಾರೋ...

ಮಾಹಿತಿ: ourtemples.in

6 ಕಾಮೆಂಟ್‌ಗಳು:

Aravind GJ ಹೇಳಿದರು...

ಛೆ... ಎಂಥಾ ದುರವಸ್ತೆ. ಈ ರೀತಿಯ ಉಡಾಫೆ ಬಹಳ ಜನರಲ್ಲಿ ಕಾಣಸಿಗುತ್ತದೆ.

Ashok ಹೇಳಿದರು...

I remember they sought financial contribution from us. Am i right sir..

Srik ಹೇಳಿದರು...

oh! I dont want to live in a "developed" world which doesnt take pride in its heritage!

Rakesh Holla ಹೇಳಿದರು...

Its really sad about the present temple condition, Villagers Unawareness about the value of this rich temple and negligence from concerned department...

mahaveer ಹೇಳಿದರು...

yaava jilleyallide, dayavittu route map kode

ರಾಜೇಶ್ ನಾಯ್ಕ ಹೇಳಿದರು...

ಪ್ರತಿಕ್ರಿಯಿಸಿದ ಗೆಳೆಯರೆಲ್ಲರಿಗೂ ಧನ್ಯವಾದ.
ಅಶೋಕ್: ಹಣ ಕೇಳಿದ್ದು ನಿಜ.
ಮಹಾವೀರ್: ಸ್ವಲ್ಪ ಹುಡುಕಾಡುವಿರಂತೆ. ಸಿಕ್ಕಿಬಿಡುತ್ತೆ.